ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರವು ರಾಜ್ಯದಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ ೩೦ದಿನಗಳನ್ನು ಪೂರೈಸಿ ಅರ್ಧ ಶತಕದತ್ತ ಸಾಗಿದೆ. ಹಾಸ್ಯನಟನಾಗಿ ಚಿತ್ರರಂಗಕ್ಕೆ ಬಂದ ನಾಗಶೇಖರ್ ಇಂಥ ಒಂದು ಅದ್ಭುತ ಕಲಾಕೃತಿಯನ್ನು ರಚಿಸಿರುವುದು ಇಡೀ ಚಿತ್ರರಂಗವೇ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದೆ.
ಮೊನ್ನೆ ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆಗಳಾದ ಪುನೀತ್ ರಾಜ್ಕುಮಾರ, ಶಿವರಾಜ್ಕುಮಾರ್, ಉಪೇಂದ್ರ, ಜಗ್ಗೇಶ್, ಅಜಯ್ರಾವ್, ಜೋಗಿ ಪ್ರೇಮ್, ರಾಕ್ಲೈನ್ ವೆಂಕಟೇಶ್ ಹಾಗೂ ಗುರುದತ್ ಸೇರಿದಂತೆ ಅನೇಕರಿಗೆ ವಿಶೇಷ ಪ್ರದರ್ಶನವನ್ನು ವೀರೇಶ್ ಮಿನಿ ಥಿಯೇಟರ್ನಲ್ಲಿ ಏರ್ಪಡಿಸಲಾಗಿತ್ತು. ಅವರೆಲ್ಲಾ ಈ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರಮ್ಯ, ಕಿಟ್ಟಿ ಅವರ ಆಕ್ಟಿಂಗ್ ನೋಡಿ ನನಗೆ ದಿಗ್ಭ್ರಮೆಯಾಯಿತು. ರಮ್ಯ ಅದ್ಭುತ ನಟಿ, ನಿರ್ದೇಶನವಂತೂ ಟೂ ಬ್ರಿಲಿಯಟ್ ಎಂದು ಚಿತ್ರ ವಿಕ್ಷಿಸಿ ಹೊರಬಂದ ಪವರ್ ಸ್ಟಾರ್ ಹೀಗೆ ಉದ್ಘರಿಸಿದರೆ, ಇದು ಇನ್ನೊಂದು ಮರೋಚರಿತ್ರೆ, ಏಕ್ ದುಜೇ ಕೇ ಲಿಯೆ ಆಗಲಿದೆ ಎಂದು ನಟ ಶಿವರಾಜ್ ಕುಮಾರ ಅಭಿಪ್ರಾಯಿಸಿದರು. ಕನ್ನಡದ ಇನ್ನೊಂದು ಅದ್ಭುತ ಕಲಾಕೃತಿ, ಚಿತ್ರದ ಮೇಕಿಂಗ್ ಆಕ್ಟಿಂಗ್ ಎಲ್ಲಾ ಮೇರು ಪಂಕ್ತಿಯಲ್ಲಿ ನಿಲ್ಲುತ್ತದೆ. ಹಾಡುಗಳಂತೂ ಎಂಥವರ ಹೃದಯವನ್ನೂ ಕರಗಿಸಿ ಥಿಯೇಟರ್ನತ್ತ ಕರೆದುಕೊಂಡು ಬರುತ್ತವೆ. ಚಿತ್ರದ ಪ್ರತಿ ಪ್ರೇಂನಲ್ಲೂ ನಿರ್ದೇಶಕನ ಜಾಣ್ಮೆ ಎದ್ದುಕಾಣುತ್ತದೆ. ಎಂದು ಸೂಪರ್ ಸ್ಟಾರ್ ಉಪೇಂದ್ರ ಮೆಚ್ಚಿಕೊಂಡರು. ಕನ್ನಡದಲ್ಲಿ ನಾನೊಬ್ಬನೇ ಮ್ಯೂಸಿಕಲ್ ಸ್ಟೋರಿ ಮಾಡುವವನು ಎಂದುಕೊಂಡಿದ್ದೆ, ನನಗೆ ಸರಿಸಮನಾಗಿ ಇನ್ನೊಬ್ಬರು ಉದಯಿಸಿದ್ದಾರೆ. ತುಂಬ ಒಳ್ಳೆಯ ಸಿನಿಮಾ ಎಂದು ನಿರ್ದೇಶಕ ಪ್ರೇಮ್ ಹೇಳಿದರು. ಇನ್ನೊಬ್ಬ ನಟ ಜಗ್ಗೇಶ್ ಮಾತನಾಡಿ ಈ ತರಹದ ಸಿನಿಮಾ ಬ್ರೇಕ್ ಮುರಿಯಲಿಕ್ಕೆ ಇನ್ನೂ ಕನಿಷ್ಟ ೫ ವರ್ಷವಾದರೂ ಬೇಕಾಗಬಹುದು. ಛಾಯಾಗ್ರಹಣ ರೀ ರೆಕಾರ್ಡಿಂಗ್, ಚಿತ್ರಕಥೆ, ಅಭಿನಯ ಎಲ್ಲಾ ಎಕ್ಸ್ಲೆಂಟ್ ಎಂದರು. ನಟ ಅಜಯರಾವ್ ಸಿನಿಮಾ ನೋಡಿ ಎಂದೂ ಅತ್ತಿದ್ದಿಲ್ಲವಂತೆ. ಫಸ್ಟ್ ಟೈಂ ಒಂದು ಚಿತ್ರ ನೋಡಿ ನನ್ನ ಕಣ್ಣಲ್ಲಿ ನೀರು ಬಂತು. ಈಗಾಗಲೇ ಜನರೇ ಈ ಚಿತ್ರವನ್ನು ಹಿಟ್ ಮಾಡಿದ್ದಾರೆ ಎಂದವರು ಹೇಳಿದರು. ನಾಗಶೇಖರ್ ಅವರ ಎರಡನೇಯ ಸಿನಿಮಾ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ತುಂಬಾ ಪಳಗಿದ ನಿರ್ದೇಶಕನ ಹಾಗೆ ಚಿತ್ರದ ಪ್ರತಿ ದೃಶದಲ್ಲೂ ತನ್ನ ಕೆಲಸ ತೋರಿಸಿದ್ದಾರೆ ಎಂದು ರಾಕ್ಲೈನ್ ವೆಂಕಟೇಶ್ ನಿರ್ದೇಶಕರನ್ನು ಹೊಗಳಿದರು. ನಾನು ಕನ್ನಡದಲ್ಲಿ ನೋಡಿದ ವಂಡರ್ಪುಲ್ ಲವ್ಸ್ಟೋರಿ, ವೆರಿವೆಲ್ ಮೇಡ್. ಪ್ರತಿ ಫ್ರೇಂನಲ್ಲೂ ನಿರ್ದೇಶಕರು ಸಿನಿಮಾ ಮೇಲೆ ಇಟ್ಟಿರುವ ಪ್ರೀತಿ ಎದ್ದು ಕಾಣುತ್ತದೆ ಎಂದು ನಟ ನಿರ್ದೇಶಕ ಚಿ.ಗುರುದತ್ ಹೇಳಿದರು.